ನಾನ್ ಯಾರಪ್ಪಾ ಅಂದ್ರೆ..

"ಹೆಸರಿನಲೇನಿದೆ, ಮಲ್ಲೆಯ ಹೂವನು ಕಳ್ಳಿಯ ಹೂವೆನೆ ಕಂಪೇನು ಕಡಿಮೆಯಾಗುವುದೇ?" ಅಂತ ಪುಣ್ಯಾತ್ಮರು ಹೇಳಿರ್ ಬೇಕಾದ್ರೂ ಹೆಸರ್ ಕೇಳೋದ್ ಸರಿನಾ? ನಾನೊಬ್ಬ ಕನ್ನಡಿಗ. ಆದ್ರೆ ಇರೋದು ಕೊಂಗ ನಾಡ್ನಲ್ಲಿ.

Friday 21 December, 2007

ಒಗ್ಗ(ದ)(ವಿವ)ರಣೆ
ತೋಚಿದ್ದನ್ನು ಗೀಚೋ ಬಿಟ್ಟಿ ಜಾಗ - ಬ್ಲಾಗ್
ಮುರಿದು ಬಿದ್ದ ಸುದ್ದಿ -
ಕುಮಾರ ಸ್ವಾಮಿಯವರ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಂತೆ. ಎಲ್ಲೆಲ್ಲೂ ಪಟಾಕಿ ಶಬ್ದವಂತೆ [ಎಲ್ಲೆಲ್ಲೂ ಯಾಕಪ್ಪಾ ಅಂದ್ರೆ ಎಲ್ಲಾ ಜಾಗವು Dev & sons' ಅವರದ್ದೆ ಅಲ್ವ]. ಅವರಿಗೆ ಹಾರ್ಟ್ ಇಲ್ಲ ಎಂಬೊ ಭಾಜಪರ ಜಪ ಈಗ ಬಂದ್ ಆಗಿದೆಯಂತೆ.
ಅಂತೂ ಇಂತೂ ಇಲ್ಲಿಗೆ ನಮ್ಮ ಹೃದಯವಂತನ ಎರಡು ಕಂತಿನ ಕಂತೆ ಪುರಾಣದ ಅಂತ್ಯ ಆಯ್ತು!
ಹೃದಯವಂತ

ನಮ್ಮ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಹೃದಯ ಶಸ್ತ್ರಚಿಕಿತ್ಸೆಯಂತೆ. ಈಗ ನನ್ನ ಕಾಡ್ತಾ ಇರೋ ಪ್ರಶ್ನೆ ಏನಪ್ಪಾ ಅಂದ್ರೆ, ಈಯಪ್ಪಂಗ ಹೃದಯ ಬೇನೆ ಯಾಕ್ ಬಂತು? ಹೇಗ್ ಬಂತು? ಯಡ್ಯೂರಪ್ಪನ್ನ ಅಷ್ಟೊಂದು ಗೋಳು ಹೊಯ್ಸಿಕೊಂಡ ಈತನಿಗೆ ಹೃದಯಾನೆ ಇಲ್ಲ ಅಂತ ಭಾಜಪರು ಕೂಗಾಡಿದ್ದು ಇನ್ನೂ ನನ್ ಕಿವಿಯಲ್ಲಿ ಗುಂಯ್ ಗುಟ್ತಾಯಿದೆ. ಅದ್ರ್ ಬೆನ್ನಾಗೆ ಕುಮಾರಣ್ಣ ಆಲ್ಟ್ ನೋವು ಅಂದ್ರೆ ಯಂಗೆ ಸಿವಾ? ನಾವ್ ಯಾರನ್ನಾ ಅಂತ ನಂಬದು?
ಮುಖ್ಯಮಂತ್ರಿ ಪಟ್ಟ ತಪ್ಪಿಹೋಯ್ತಲ್ಲಾ ಅಂತ ಚಿಂತೆ ಮಾಡಿ ಮಾಡಿ ಈ ರೀತಿ ಆಗಿದೆ, ಇದಕ್ಕೆ ಭಾಜಪರೇ ಕಾರಣ ಅಂತ ಜಾತಿಗೆಟ್ಟವರು ಅಲ್ಲಲ್ಲ, ಜಾತ್ಯಾತೀತರು ಆಕ್ಷೇಪ ವ್ಯಕ್ತಪಡಿಸಿದ್ದಾರಂತೆ. ಇಡಿ ರಾಜ್ಯವೇ ತನ್ನದು ಅನ್ನೋ ಏಕತಾ ಮನೋಭಾವ ನಮ್ಮ ಕುಮಾರಣ್ಣಂದು, ಆದ್ರಿಂದ ಅವರಿಗೆ ಆಲ್ಟ್ ಇದೆ ಅನ್ನೋದು ಜಾ.ರವರ ವಾದ. ನಿಜ ಅಲ್ವೆ ಮತ್ತೆ? ಇಡಿ ರಾಜ್ಯದ ಭೂಮಿಯನ್ನೆಲ್ಲಾ ನುಂಗಿದ ಫ್ಯಾಮಿಲಿ ಅಲ್ಲವೆ ಅವರದ್ದು? ಅಂದ ಮೇಲೆ ಇಡಿ ರಾಜ್ಯವೇ ನಮ್ಮದು ಅನ್ನೋ ಭಾವನೆ ಹೊಂದಿರೋದು ತಪ್ಪಲ್ಲ ಬಿಡಿ. ಎಲ್ಲಾ ಗಣಿಗಳ [ಸ-ಗಣಿ ಸಮೇತ] (ಅ)ವ್ಯವಹಾರವನ್ನ ನಿಭಾಯಿಸಿಕೊಂಡು ಬರುವಂಥ ಜವಾಬ್ದಾರಿಯುತ ಮನುಷ್ಯ ನಮ್ಮ ಕುಮಾರಣ್ಣ. ಎಂಥಾ ಒಳ್ಳೆ ಮನಸ್ಸು, ಜನಾರ್ಧನ ರೆಡ್ಡಿಗೆ ಯಾಕೆ ಸುಮ್ನೆ ಈ ವ್ಯವಹಾರದ ತಲೆ ನೋವು? ಅಷ್ಟೆ ಯಾಕ್ ಸ್ವಾಮಿ, ಎಲ್ಲಾ ಜನರೂ ತನ್ನವರೆಂದೇ ಭಾವಿಸಿರೋರು ನಮ್ಮ ಕುಮಾರಣ್ಣ. ಅದಕ್ಕೆ ಅಲ್ಲವೆ ಕಂಡ ಕಂಡ ಊರಿಗೆಲ್ಲಾ ಹೋಗಿ ಗ್ರಾಮೀಣ ವಾಸ್ತವ್ಯ ಮಾಡಿದ್ದು? ಆ ಜನಗಳ ಅದೃಷ್ಟ ಎಷ್ಟ್ ಒಳ್ಳೆದು ಅಂತೀರಿ? ನಾಡಿನ ಮುಖ್ಯಮಂತ್ರಿಗಳು ಸ್ವತಃ ತಮ್ಮ ಮನೆಗೆ ಬಂದು, ಸಾಲ ಮಾಡಿ ತಂದು ಮಾಡಿದ ನಾಟಿ ಕೋಳಿ ಸಾರು - ಮುದ್ದೆಯನ್ನ ಗಡದ್ದಾಗಿ ಉಂಡು, ಗೊರಕೆ ಹೊಡೆಯುವಂತೆ ನಿದ್ದೆ ಮಾಡಿದರು ಅಂದ್ಮೇಲೆ ನಮ್ಮ ಗ್ರಾಮೀಣರದ್ದು ಭೋ ಒಳ್ಳೆ ಪುಣ್ಯ ಸ್ವಾಮಿ. ಎಂಥಾ ಪರಸ್ಥಳದಲ್ಲೂ ಉಂಡು ಮಲಗುವಂಥ ವಿಶಾಲ ಮನಸ್ಸು ನಮ್ಮ ಕುಮಾರಣ್ಣಂದು, ಆದ್ರಿಂದ ಅವ್ರುಗೆ ರುದಯ ಅದೆ ಅನ್ನೋದು ಅವರ ಹಿಂಬಾಲಕರ ವಾದ. ತಾನೇನೊ ತಿಂದು ಮಲಗಿಯಾಯ್ತು. ಆದ್ರೆ ಆ ಜನಗಳು ಮಾಡಿದ ಸಾಲ ತೀರಿಸೋರು ಯಾರು? ತಾನು ಮಲಗಿದಾಗ ಆ ಜನಗಳು ತಾವು ಮಲಗದೆ ತನ್ನ ಕಾವಲು ಕಾಯ್ದರಲ್ಲ, ಅವರ ಬಗ್ಗೆ ನಾನೇನು ಮಾಡ್ಲಿಲ್ಲವಲ್ಲ ಅನ್ನೊ ಪಶ್ತಾತ್ತಾಪವೆ ಇಲ್ಲ ಈ sonಸ್ವಾಮಿಗೆ. ಆದ್ರಿಂದ ಇವರಿಗೆ ಹೃದಯ ಇಲ್ಲ, ಇನ್ನು ಹೃದಯದ ಶಸ್ತ್ರಚಿಕಿತ್ಸೆ ಯಾಕೆ? ಎಲ್ಲಾ ಬರಿ ಗಿಮಿಕ್ಕು ಅಂತ ಇತ್ತ ಭಾಜಪರ ಕುಹಕ.
ನೀನೇನಂತೀಯ ಗುರು?

Thursday 20 December, 2007

ಡಿಸೆಂಬರ್ ಮಾಸ...

ಡಿಸೆಂಬರ್ ಅಂದ್ರೆ ಕೆಲವರಿಗೆ ಕ್ರಿಸ್ಮಸ್, ಕೆಲವರಿಗೆ ಶಿಮ್ಲಾ-ಮನಾಲಿ ಪ್ರವಾಸ, ಐಐಟಿ ಹುಡುಗರಿಗೆ ನೌಕರಿ/ಯುನಿವೆರ್ಸಿಟಿಗಳ ಚಿಂತೆ. ಮತ್ತೆ ಕೆಲವರು ಚಳಿ ಚಳಿ ತಾಳೆನು ಈ ಚಳಿಯಾ, ಆಹಾ! ಅಂತ ತಮ್ಮ ಪಾಡಿಗೆ ತಾವೆ ಹಾಡಿಕೊಂಡಿರ್ತಾರೆ. ಆದ್ರೆ ನನಗ್ ಮಾತ್ರ ಬೇರೇನೇ ಚಿಂತೆ. ಕೈಯಲ್ಲಿರೋ ಅಷ್ಟೊಂದು ಕೆಲಸದ ನಡುವೆ ಸಹಾ ಸಂಗೀತ ಸಭೆಗಳಿಗೆ ಹೋಗೊ ಚಿಂತೆ. ಡಿಸೆಂಬರ್ ಅಂದ್ರೆ ಸಾಕು, ಈ ಕೊಂಗ ನಾಡು ನಂಗೆ ಸಂಪೂರ್ಣ ಬೇರೆ ಥರಾನೇ ಕಾಣತ್ತೆ . ಇಲ್ಲದೆ ಹೋದಲ್ಲಿ ಇಲ್ಲಿ ಇರೋ ನಾವು ಕನ್ನಡ ಕುಲ ಪುತ್ರರು ಗಾಂಧಿಯ [ಈ ಹೆಣ್ಣು 'ಗಾಂಧಿ' ಅಲ್ಲಾ ಸ್ವಾಮಿ, ಆ ತಾತ ಗಾಂಧಿ!]೩ ಕೋತಿಗಳಂತೆ ಇರಬೇಕಾಗುತ್ತೆ - ಊರು ತುಂಬಾ ನಾರು, ಎಲ್ಲೆಲ್ಲೂ ಕರ್ಕಶ ಕಿರುಚಾಟ [ಅವರುಗಳು ಮಾತಾಡೋದೇ ಹಾಗೆ!], ಊರಿಗೆ ಊರೇ ಕೊಳೆಗೇರಿ! ಆದ್ರೆ ಈ ಮಾಸದಲ್ಲಿ ಮಾತ್ರ ಇದು ರಸಿಕರಿಗೆ ಸ್ವರ್ಗ.
ನಾನು ಕಳೆದ ಡಿಸೆಂಬರಿನಲ್ಲೂ ಸಂಗೀತ ಕಛೇರಿಗಳಿಗೆ ಹೋಗಿದ್ದೆ. ಆದ್ರೆ ಈ ಬಾರಿ ತುಂಬ ಇಷ್ಟ ಆಗ್ತಿದೆ. ಬಹುಶಃ ಡಾ|ಸುಕನ್ಯಾ ಪ್ರಭಾಕರ್ ಅವರ ಹಾಡುಗಾರಿಕೆಯಿಂದ, ಮೈಸೂರು ಸಹೋದರರ ಪಿಟೀಲು ವಾದನದಿಂದ, ಹಾಗು ಈ ಬಾರಿ ಕಳೆದ ಬಾರಿಗಿಂತ ಹೆಚ್ಚು ಕನ್ನಡಿಗರು ಸಂಗೀತ ಮಂಚದ ಮೇಲೆ ಕಾಣಿಸಿಕೊಂಡಿದ್ದರಿಂದ..ಹಾಗೆ ಹೆಚ್ಚಿನವರು ಮೈಸೂರಿನವರು ಅನ್ನೋದು ತಿಳಿದದ್ದರಿಂದ :)
ಖುಶಿ ಆಗ್ತಿದೆ. ಹಾಗೇನೇ ಸಿಟ್ಟೂ ಬರ್ತಿದೆ. ಸಂಗೀತ ವಿದೂಶಿಯದ ಡಾ|ಸುಕನ್ಯಾ ಪ್ರಭಾಕರ್ ಅವರಿಗೆ ಕೇವಲ ಒಂದೇ ಒಂದು ಅವಕಾಶ- ಇಡೀ ಮಾಸದಲ್ಲಿ! ಕತ್ತೆಗಳಂತೆ ಕಿರುಚುವವರಿಗೆ ಐದಾರು ಕಛೇರಿಗಳಾದರೂ ಮಾಡುವ ಅವಕಾಶ! ಸುಕನ್ಯಾ ಅವರ ಮಾತು ಕೇಳಿ ಬೇಸರ ಆಯ್ತು; ಅವರ ಹಿಂದಿನ ಕಛೇರಿ ೧೯೮೭ರಲ್ಲಿ ಇದ್ದದ್ದಂತೆ, ಅದಾದ ಮೇಲೆ ಈಗಲೇ ಅವಕಾಶ ಸಿಕ್ಕಿದ್ದು ಮ್ಯುಸಿಕ್ ಅಕಾಡೆಮಿಯಲ್ಲಿ ಕಛೇರಿ ಕೊಡೋಕೆ!ಮಧ್ಯದಲ್ಲಿ ಐಐಟಿಯಲ್ಲಿ ಜರುಗುವ ಪುರಂದರದಾಸರ ಆರಾಧನೆಗೆ ಒಮ್ಮೆ ಬಂದದ್ದಂತೆ. ಛೇ! ಇಲ್ಲಿನ ಮ್ಯುಸಿಕ್ ಅಕಾಡೆಮಿಯಲ್ಲಿ ಹಾಡುವುದು ಹೆಮ್ಮೆಯ ವಿಷಯವೇನೋ ಸರಿ, ಆದ್ರೆ ಈ ಥರ ಒಬ್ಬ ವಿದೂಷಿಯನ್ನ ನಡೆಸಿಕೊಳ್ಳೋದು ಎಷ್ಟು ಸರಿ? ನಾವು ಕನ್ನಡಿಗರೂ ಅಷ್ಟೆ, ಬೆಂಗಳೂರು ಹಬ್ಬ ಅಂತ ಏನೋ ಮಾಡಿ ಸೋನು ನಿಗಮ್ ನಿಂದ ಹಿಂದಿ ಹಾಡಿಸ್ತೀವಿ. ಶಾಸ್ತ್ರೀಯ ಸಂಗೀತದ ಹೆಸರಿನಲ್ಲಿ ಕನ್ನಡಿಗರಲ್ಲದವರನ್ನೇ ಕರೆಸ್ತೀವಿ. ಒಂದು ಪಕ್ಷ ಕನ್ನಡಿಗರಿಗೆ ಅವಕಾಶ ಕೊಟ್ಟರೂ, ಕಡಿಮೆ ಸಂಭಾವನೆ ಕೊಡ್ತೀವಿ. ಏನಾಗಿದೆ ನಮಗೆ, ಅಥವ ನಂದಿನಿ ಆಳ್ವಾ ಅಂಥವರಿಗೆ ?
ಇದು ಕಲಾವಿದರ ಸ್ಥಿತಿಯಾದರೆ ನಮ್ಮ ಪುಣ್ಯಾತ್ಮ ದಾಸವರೇಣ್ಯರು, ಕರ್ನಾಟಕದ ವಾಗ್ಗೇಯಕಾರರನ್ನೂ ಕೇಳೋರು ಯಾರೂ ಇಲ್ಲ. ಸುಕನ್ಯ ಅವರಿಂದ ವಾದಿರಾಜರ ಹಾಗು ಜಯಚಾಮರಾಜ ಒಡೆಯರ್ ಅವರುಗಳ ರಚನೆ ಕೇಳಿ ಎಂಥ ಪರಮಾನಂದ ಆಯ್ತು. ಇಲ್ಲಿನ ಕಲಾವಿದರು ಯಾರೂ ಕನ್ನಡ ರಚನೆಗಳನ್ನ ಹಾಡೋಲ್ಲ. ’ಕೃಷ್ಣಾ ನೀ ಬೇಗನೆ ಬಾರೊ’ ಹಾಡಿ ಹಾಡಿ ಸಾಕಾಗಿದೆ ಇವರುಗಳಿಗೆ.
ನಾವೂ ಯಾಕೆ ನಮ್ಮದೆ ಸಂಗೀತ ಉತ್ಸವಗಳನ್ನ ಮಾಡಬಾರ್ದು? ಅಥವ ಇರೋ ಉತ್ಸವಗಳನ್ನೆ [ರುದ್ರಪಟ್ಟಣದ ಉತ್ಸವ, ದಾಸರ ಆರಾಧನೆ, ಇತ್ಯಾದಿ] ಇನ್ನಷ್ಟು ಉತ್ತಮಗೊಳಿಸಿ, ಪ್ರಚಾರ ಮಾಡಬಾರದು?
ನಾವೆಲ್ಲಾ regionally chauvinistic ಆಗಬೇಕು ಅಂತ ಅಲ್ಲ. ಆದ್ರೆ ಈ ಥರ ಅವಮಾನಗನ್ನೆಲ್ಲಾ ಸಹಿಸಿಕೊಳ್ಳೋದು ಯಾಕಪ್ಪ?
ಏನಪ್ಪಾ ಅಂದ್ರೆ...

ಕನ್ನಡದ ಬಗ್ಗೆ ಹುಚ್ಚು ಅನ್ನೋವಂಥ ಅಭಿಮಾನ. ಕನ್ನಡದ ಉದ್ಧಾರಕ್ಕೆ ಕೆಲಸ ಮಾಡಿದ್ದೀನಿ ಅಂತ ಹೇಳಿಕೊಂಡರೆ ಖಂಡಿತ ಅದು ಅತಿಶಯೋಕ್ತಿಯೇ ಸರಿ ! ಕನ್ನಡ ವಿರೋಧಿಗಳ ಜನ್ಮ ಜಾಲಾಟ ನನ್ನ ಹವ್ಯಾಸ. ಈ ಬ್ಲಾಗ್ ನಲ್ಲೂ ಬಹುತೇಕ ಅದನ್ನೇ ಮಾಡೋಣಾಂತ. ಜೊತೆಗೆ ರಾಜಕೀಯದಲ್ಲಿ ಎಲ್ಲಿಲ್ಲದ ಆಸಕ್ತಿ. ಈ ದೇಶದಲ್ಲಿ ರಾಜಕೀಯದ ಸೋಂಕು ತಗುಲದೇ ಇರೋರು ಯಾರೂ ಇಲ್ಲ ಅನ್ನೋದು ನನ್ನ ನಂಬಿಕೆ. ಹಾಗಾಗಿ ರಾಜಕೀಯದ ಬಗ್ಗೆನೂ ಇಲ್ಲಿ ಬರೆಯೋಣಾಂತ. ಈ ಕಾಲದಲ್ಲಿ, ಅಷ್ಟೋಂದು ಬ್ಲಾಗ್ ಗಳಿರೋವಾಗ ನಿಂದ್ಯಾವನೋತ್ತಾನೆ ಹೋಗಲೇ ಅಂತ ನೀವ್ ಹೇಳ್ ಬಹುದು.
ಪರವಾಗಿಲ್ಲ, ನನ್ ಖುಶಿಗ್ ನಾನ್ ಬರ್ಯೋದು, ನಿನ್ ಓದು ಅಂದೋರ್ಯಾರಲೇ? ಅಂತ ನಾನ್ ಹೇಳ್ತಿನಿ!!
ಅಭಿಪ್ರಾಯ, ಅನಿಸಿಕೆ, ಉಗುಳಿಕೆ - ಎಲ್ಲಾನು ತಿಳಿಸಿ.
ಯಾಪ್ಪಿ ರೀಡಿಂಗು ಮಗ [ಹಾಗು ಮಗಳು :)]
“ನನ್ನಂತಹವರು ಕನ್ನಡಕ್ಕೆ ಅನೇಕರಿದ್ದಾರೆ. ನನಗಿರುವುದು ಒಂದೇ ಕನ್ನಡ.” ಅನಕೃ ಅವರ ಈ ಮಾತು ನಮ್ಮೆಲ್ಲರಿಗೂ ಅನ್ವಯ; ಈ ಬ್ಲಾಗಿಗೂ!